ಮೂರು ಲೋಕ ಶುಕ್ರವಾರ, ಮಾರ್ಚ್ 19 2010 

೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .

೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .

೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

ISHWARA BHAT K

೦೪.೦೨.೨೦೦೫

ಅವಳ ಪ್ರೀತಿಗೆ , ನನ್ನ ಬದುಕಿಗೆ ! ಸೋಮವಾರ, ಮಾರ್ಚ್ 15 2010 

 
೧. ಅವಳಿಗೆ
ಬಾಳ ಬಂಧನದ ಹೊರೆಗಾದೆ ನೀನು ನೊಗ
ಆಗಲಾರೆನು ನಾನು ನೊಗಕೆ ಹೊರೆಯು !!
 
೨. ಪ್ರೀತಿಗೆ
ಗುರಿಯಿರದೆ ಶರವೆಸೆದೆ !
ಮರಣ ತಪ್ಪಿತು , ಉಳಿಸಿಹೋಯಿತು ನೋವ
ಬಾರದೇ ಮರಳಿ ಬಾಣ ?!
 
೩.ನನಗೆ
ಮಾಸಿ ಹೋಗಿದೆ ನೆನಪು ಎಂದು
ಮೋಸಹೋಗಿದೆ ಮನಸು ,
ಮರೆತು ಮಲಗಿದೆ ಕನಸ ಗಾಯವು
ವಾಸಿಯಗದೆ ಉಳಿವೆ ಎಂದು !
 
೪. ಬದುಕಿಗೆ
ಕತ್ತಲನ್ನೇ ಸುಟ್ಟ ಬೆಳಕು
ಕಣ್ಣಿಗೆ ಬಿದ್ದಾಗ
ಬೆಳಕೇ ಸುಟ್ಟುಹೋಯಿತು.
 
ISHWARA BHAT K
೨೬.೦೭.೨೦೦೯  

ಒಂದು ಸತ್ಯ ಶನಿವಾರ, ಮಾರ್ಚ್ 13 2010 

ಒಂದು ಸತ್ಯ

ಒಂದು ತಿಂಗಳ ಹಿಂದೆ
ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ .
ಇಲ್ಲೆ ದಾರಿಯಲ್ಲಿ ಡಿಕ್ಕಿ ಹೊಡೆದು ಕೆಳಗೆ ಬಿದ್ದೆ .
ಮರವೋ ಕಂಬವೋ ತಿಳಿಯಲಿಲ್ಲ .
ಈಗ ಭೂಮಿಯಲ್ಲಿ ನಡೆಯುವುದನ್ನು ಕಲಿಯುತ್ತಿದ್ದೇನೆ !!.
 
ISHWARA BHAT K
೨೩.೧೧.೨೦೦೬

ನಾನು ಮತ್ತು ಗಿಳಿ !! ಸೋಮವಾರ, ಮಾರ್ಚ್ 8 2010 

                        ೧

ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ
ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ 
ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು 
ಈ ಹಕ್ಕಿ ಎಸ್ಟೊಂದು ಚೆನ್ನ
ಪ್ರಕೃತಿದೇವಿಗೆ ನನ್ನದೊಂದು ನಮನ
 
ಅಷ್ಟು ಸ್ನೇಹಿಯೇ ನಾನು ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕಿ
ಹೆದರದೇ ಕುಳಿತಿದೆಯಲ್ಲ
ಸವಿಯ ಭಾವವ ತುಂಬಿ ಹರಸುತ್ತಿದ್ದೇನೆ !!
                   
                       ೨
ಸರಿಯಾಗಿ ನೋಡಿದರೆ 
ಸಣ್ಣ ಮೆಣಸಿನ ಬೀಜ ಕೊಕ್ಕಂಚಿನಲ್ಲಿ 
ನಾನು ಸಾಕಿದ ಗಿಡದ್ದೇ ಇರಬೇಕು .!
ಹಾಳು ಹಕ್ಕಿ ! ಬಿಡಲೇಬಾರದು ಇದನು
ಕೈಗೆ ಸಿಕ್ಕಿದ್ದನ್ನೆಸೆದೆ 
 
ಹಾರಿಹೋಯಿತೆ ಗಿಳಿ ಛೆ !?
ಸರಿಯಾಗಿ ಬೀಳಬೇಕಿತ್ತು ಪೆಟ್ಟು 
ಇನ್ನೊಮ್ಮೆ ಬರಲಿ ಎಂದು 
ಕಲ್ಲು ಕೈಯೊಳಗಿಟ್ಟು ಕಾಯುತ್ತಿದ್ದೇನೆ !!
 
ISHWARA BHAT K
೨೦-೦೨-೨೦೦೫

ಭಗ್ನ ಪ್ರೇಮಿಗೆ !! ಶನಿವಾರ, ಮಾರ್ಚ್ 6 2010 

ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?
 
ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?
 
ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .
 
ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .
 
ISHWARA BHAT K
೩೧-೦೧-೨೦೦೫